ಕರ್ನಾಟಕ
ಯಡಿಯೂರಪ್ಪ, ಸಂತೋಷ್ ಬಣ ಫೈಟ್ ವಿಪಕ್ಷ ನಾಯಕ ಖುರ್ಚಿ ಅನಾಥ! ಬಿಜೆಪಿಗೆ ರಾಜಕೀಯ ದಾರಿದ್ರ್ಯ ಅಂಟಿದೆ- ಕಾಂಗ್ರೆಸ್
ಬೆಂಗಳೂರು: ಒಬ್ಬ ವಿರೋಧ ಪಕ್ಷ ನಾಯಕ ಸಿಗದಷ್ಟು ಕರ್ನಾಟಕ ಬಿಜೆಪಿಗೆ ರಾಜಕೀಯ ದಾರಿದ್ರ್ಯ ಅಂಟಿಕೊಂಡಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಟ್ವೀಟ್ ಮಾಡಿ ಕಾಲೆಳೆದಿದೆ.
ರಾಜ್ಯದಲ್ಲಿ ಚುನಾವಣೆ ನಡೆದು ಮೂರು ತಿಂಗಳು ಪೂರ್ಣಗೊಳ್ಳುತ್ತಾ ಬಂದಿದೆ. ಸರ್ಕಾರ ರಚನೆಯಾಗಿ ಎರಡೂವರೆ ತಿಂಗಳಾಗಿವೆ. ಆದರೆ, ರಾಜ್ಯದ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ ಈವರೆಗೂ ತನ್ನ ವಿಧಾನಸಭಾ ವಿರೋಧ ಪಕ್ಷದ ನಾಯಕ ಯಾರು ಎಂದು ಘೋಷಿಸಿಲ್ಲ. ಈ ಹಿನ್ನೆಲೆ ಆಡಳಿತ ಪಕ್ಷ ಕಾಂಗ್ರೆಸ್ ಟೀಕಿಸಿದೆ.
ಏನಿದೆ ಕಾಂಗ್ರೆಸ್ ಟ್ವೀಟ್ನಲ್ಲಿ?
” ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ಐದು ವರ್ಷವೂ ಕಳೆದುಹೋಗುವ ಸಾಧ್ಯತೆ ಇದೆ! ಸಂತೋಷ ಬಣ, ಬಿಎಸ್ ಯಡಿಯೂರಪ್ಪ ಬಣದ ಗುದ್ದಾಟದಲ್ಲಿ ವಿಪಕ್ಷ ನಾಯಕನ ಕುರ್ಚಿ ಅನಾಥವಾಗಿಯೇ ಉಳಿಯಲಿದೆ ” ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.
ಕರ್ನಾಟಕ ಬಿಜೆಪಿಗೆ ರಾಜಕೀಯ ದಾರಿದ್ರ್ಯ
ಕೆಪಿಸಿಸಿ ಮುಂದುವರೆದು ಟ್ವೀಟ್ನಲ್ಲಿ, ” ಪಕ್ಷಕ್ಕೆ ಒಬ್ಬ ಅಧ್ಯಕ್ಷ, ವಿಧಾನಸಭೆಗೆ ಒಬ್ಬ ವಿಪಕ್ಷ ನಾಯಕ ಸಿಗದಷ್ಟು ಕರ್ನಾಟಕ ಬಿಜೆಪಿಗೆ ರಾಜಕೀಯ ದಾರಿದ್ರ್ಯ ಅಂಟಿಕೊಂಡಿದೆ. ಇಂತಹ ಹೀನಾಯ ಸ್ಥಿತಿಗೆ ತಳ್ಳಿದ್ದು ಬಿಜೆಪಿಯ ಹೈಕಮಾಂಡೊ ಅಥವಾ ಸಂತೋಷ ಕೂಟವೋ? ಎಂದು ಪ್ರಶ್ನೆ ಮಾಡಿದೆ.
ಇನ್ನು ರಾಜ್ಯದ ವಿಧಾನಸಭೆ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕ ಇಲ್ಲದೆ ನಡೆದ ಮೊದಲ ಅಧಿವೇಶನ ಇದಾಗಿತ್ತು. ಬಜೆಟ್ ಕೂಡಾ ಮಂಡನೆಯಾಗಿದ್ದು, ಇದೇ ಮೊದಲಾಗಿತ್ತು. ಆದರೆ, ಇಂದಿಗೂ ಬಿಜೆಪಿ ಹೈಕಮಾಂಡ್ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ.
ರೇಸ್ನಲ್ಲಿ ಬೊಮ್ಮಾಯಿ, ಯತ್ನಾಳ್!
ಇನ್ನು ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕನ ರೇಸ್ನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದ್ದಾರೆ. ಇವರನ್ನು ಹೊರತು ಪಡಿಸಿ ಆರ್.ಅಶೋಕ್ ಕೂಡಾ ಪಯತ್ನ ಮಾಡುತ್ತಿದ್ದಾರೆ ಎಂಬ ಚರ್ಚೆಗಳು ಕೇಳಿಬಂದಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಕೂಡಾ ಬದಲಾವಣೆ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಕೂಡಾ ಬದಲಾವಣೆ ಮಾಡಲು ಹೈಕಮಾಂಡ್ ಮುಂದಾಗಿದೆ. ಈ ಸ್ಥಾನಕ್ಕೆ ಮಾಜಿ ಶಾಸಕ, ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿಟಿ ರವಿ ಅವರ ಹೆಸರು ಮುಂಚೂಣಿಯಲ್ಲಿತ್ತು. ಜತೆಗೆ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರ ಹೆಸರು ಕೂಡಾ ಚೆರ್ಚೆಗೆ ಬಂದಿದೆ.






