Connect with us

ಕರ್ನಾಟಕ

ಮಧ್ಯಪ್ರದೇಶ ಗೆಲ್ಲಲು ಕಾಂಗ್ರೆಸ್‌ ‘ಗ್ಯಾರಂಟಿ’ ಮೊರೆ! 150 ಸೀಟ್‌ ಗೆಲ್ತೀವಿ ಎಂದ ರಾಹುಲ್‌ ಗಾಂಧಿ

Published

on

ನವದೆಹಲಿ: ಕರ್ನಾಟಕದ ಭರ್ಜರಿ ಗೆಲುವಿನ ಉತ್ಸಾಹದಲ್ಲಿರುವ ಕಾಂಗ್ರೆಸ್‌ ಹೈಕಮಾಂಡ್‌, ಮುಂಬರುವ ಮಧ್ಯ ಪ್ರದೇಶ ಸೇರಿ ಹಲವು ರಾಜ್ಯಗಳ ಚುನಾವಣೆ ಗೆಲ್ಲಲು ಈಗಿನಿಂದಲೇ ಚುನಾವಣಾ ರಣತಂತ್ರಗಳನ್ನು ಹೆಣೆಯಲು ಸಿದ್ಧತೆಗಳನ್ನು ನಡೆಸುತ್ತಿದೆ. ರಾಜಸ್ಥಾನದಲ್ಲಿ ಅಧಿಕಾರ ಉಳಿಸಿಕೊಳ್ಳುವುದರ ಜತೆಗೆ ಬಿಜೆಪಿ ತೆಕ್ಕೆಯಲ್ಲಿರುವ ಮಧ್ಯ ಪ್ರದೇಶವನ್ನು ಗೆಲ್ಲಲು ಕಾಂಗ್ರೆಸ್‌ ‘ಗ್ಯಾರಂಟಿ’ಗಳ ಮೊರೆ ಹೋಗಿದೆ ಎಂದು ಹೇಳಲಾಗುತ್ತಿದೆ.

ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾಯಕ ರಾಹುಲ್‌ ಗಾಂಧಿ ಅವರು ಮಧ್ಯಪ್ರದೇಶ ಮಾಜಿ ಸಿಎಂ ಕಮಲ್‌ನಾಥ್‌, ರಾಜ್ಯ ಉಸ್ತುವಾರಿ ಪಿ ಅಗರ್‌ವಾಲ್‌, ಮಾಜಿ ಸಿಎಂ ದಿಗ್ವಿಜಯ್‌ ಸಿಂಗ್‌ ಸೇರಿದಂತೆ ಹಲವು ನಾಯಕರ ಜತೆ ಸೋಮವಾರ ಸಭೆ ನಡೆಸಿದರು.

”ಚುನಾವಣೆ ವೇಳೆ ಭಿನ್ನಮತ ಮರೆತು ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಕರ್ನಾಟಕ ಚುನಾವಣೆಯ ಫಲಿತಾಂಶ ಇಲ್ಲೂ ಮರುಕಳಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಈಗಿನಿಂದಲೇ ತಯಾರಿ ಮಾಡಿಕೊಳ್ಳಿ,” ಎಂದು ರಾಜ್ಯದ ನಾಯಕರಿಗೆ ಖರ್ಗೆ ಹಾಗೂ ರಾಹುಲ್‌ ಗಾಂಧಿ ಸೂಚಿಸಿದರು.

ಮಧ್ಯಪ್ರದೇಶದಲ್ಲೂ ಗ್ಯಾರಂಟಿಗೆ ಪ್ಲ್ಯಾನ್‌!

ಕರ್ನಾಟಕ ಚುನಾವಣೆಯಲ್ಲಿ ರೂಪಿಸಿದ ಪ್ರಣಾಳಿಕೆ ಮಾದರಿಯಲ್ಲೇ ಮಧ್ಯಪ್ರದೇಶದಲ್ಲೂ ಉಚಿತಗಳ ಘೋಷಣೆಗೆ ಕಾಂಗ್ರೆಸ್‌ ಮುಂದಾಗಿದೆ ಎನ್ನಲಾಗಿದೆ. ‘ಗೃಹಲಕ್ಷ್ಮೀ’ ಮಾದರಿಯಲ್ಲಿ’ನಾರಿ ಸಮ್ಮಾನ್‌’ ಫ್ರೀ ವಿದ್ಯುತ್‌, ಓಪಿಎಸ್‌ ಮೊದಲಾದ ಫ್ರೀಬೀಸ್‌ ಈಗಾಗಲೇ ಘೋಷಣೆ ಮಾಡಿದೆ.

500ರೂ.ಗೆ ಸಿಲಿಂಡರ್‌, ಮಹಿಳೆಯರಿಗೆ 1500 ರೂ. ಮಾಸಾಶನ, 100 ಯುನಿಟ್‌ ವಿದ್ಯುತ್‌ ಫ್ರೀ, 200 ಯುನಿಟ್‌ಗೆ ಶೇ.50 ರಿಯಾಯಿತಿ, ರೈತರ ಸಾಲ ಮನ್ನಾ, ಹಳೆ ಪಿಂಚಣಿ ಯೋಜನೆ ಮರು ಜಾರಿಯ ಭರವಸೆಯನ್ನು ಕಾಂಗ್ರೆಸ್‌ ನೀಡಿದೆ.

150 ಸೀಟು ಪಕ್ಕಾ ಎಂದ ರಾಹುಲ್‌ ಗಾಂಧಿ

230 ಸದಸ್ಯಬಲದ ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ಈ ಬಾರಿ 150 ಸೀಟು ಗೆಲ್ಲುವ ಭರವಸೆಯಲ್ಲಿ ಕಾಂಗ್ರೆಸ್‌ ಇದೆ. ಸೋಮವಾರದ ಸಭೆ ಬಳಿಕ ಮಾತನಾಡಿದ ರಾಹುಲ್‌ ಗಾಂಧಿ, ”ಕರ್ನಾಟಕ ಚುನಾವಣೆಯಲ್ಲಿ ನಾವು ಎಣಿಸಿದಂತೆ 136 ಸ್ಥಾನದಲ್ಲಿ ಗೆದ್ದಿದ್ದೇವೆ. ಮಧ್ಯಪ್ರದೇಶದಲ್ಲೂಆಂತರಿಕ ಸಮೀಕ್ಷೆ ಪ್ರಕಾರ 150 ಸ್ಥಾನ ಗೆಲ್ಲುವ ವಿಶ್ವಾಸವಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಹೊಸದರಲ್ಲಿಯೇ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲಿದೆ,” ಎಂದು ಹೇಳಿದರು.

Home
Videos
Shop
error: Content is protected !!