Connect with us

ಕರ್ನಾಟಕ

ದೇವೇಗೌಡ್ರಿಗೆ ಇನ್ನು ಶಕ್ತಿಯಿದೆ; ಲೋಕಸಭಾ ಚುನಾವಣೆಗೆ ನಿಲ್ತಾರೆ: ಎಚ್‌.ಡಿ. ರೇವಣ್ಣ

Published

on

ಹಾಸನ: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರಿಗೆ ಇನ್ನು ಶಕ್ತಿಯಿದ್ದು, ಶೀಘ್ರವೇ ಸಭೆ ಕರೆದು ಚರ್ಚೆ ಮಾಡಿ ಮುಂದಿನ ತೀರ್ಮಾನವನ್ನು ಕೈಗೊಳ್ಳುತ್ತೇವೆ. ಹಾಸನದಲ್ಲಿ ಶಾಸಕ ಎಚ್‌.ಪಿ. ಸ್ವರೂಪ್ ಪರ ನಾವೆಲ್ಲಾ ನಿಲ್ಲುತ್ತೇವೆ ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ಹೇಳಿದ್ದಾರೆ.

ಹಾಸನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 4 ಸ್ಥಾನ ಗೆದ್ದಿದ್ದೇವೆ, ಮೂವರು ಸೋತಿದ್ದಾರೆ. ನಮಗೆ ಮತ ನೀಡಿದ ಎಲ್ಲರಿಗೂ ಧನ್ಯವಾದಗಳು. ಈ ಚುನಾವಣೆ ಫಲಿತಾಂಶವನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳುತ್ತೇವೆ. ಈ ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮನ್ನ ಮುಗಿಸಲು ಯತ್ನ ಮಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಒಳ್ಳೆ ಕಲಸ ಮಾಡಲಿ. ಅವರು ಕೊಟ್ಟಿರುವ ಗ್ಯಾರಂಟಿ ಕಾರ್ಡ್ ಪ್ರಕಾರ ಕೆಲಸ ಮಾಡಬೇಕು ಎಂದರು.

ರಾಷ್ಟ್ರೀಯ ಪಕ್ಷಗಳ ಮುಖಂಡರೇ ಸೋತಿರುವಾಗ ನಮ್ಮದೇನಿದೆ. ಕೆಲ ನಾಯಕರು ನಮ್ಮನ್ನು ಮುಗಿಸಬೇಕು ಎಂದು ನಾಲ್ಕು ವರ್ಷದಿಂದ ಹೋರಾಟ ಮಾಡಿದರು. ಆದರೆ, ಜನರು ನಮ್ಮನ್ನ ಉಳಿಸಿಕೊಂಡಿದ್ದಾರೆ. ನಾವು ಸೋಲು ಗೆಲುವು ಎರಡನ್ನು ನೋಡಿದ್ದೇವೆ. ಕೋಮುವಾದಿಗಳನ್ನು ದೂರ ಇಡಬೇಕು ಎಂದು ಜನರು ಕಾಂಗ್ರೆಸ್‌ಗೆ ಬಹುಮತ ಕೊಟ್ಟಿದ್ದಾರೆ ಎಂದು ಹೇಳಿದರು.

ಒಂದು ಕ್ಷೇತ್ರದಲ್ಲಿ ನಾವು ಅಲ್ಪ ಮತದಿಂದ ಸೋತಿದ್ದೇವೆ. ಮಂಡ್ಯದಲ್ಲಿ ಕೂಡ ಜೆಡಿಎಸ್ ತೆಗಿಬೇಕು ಎಂದು ಪ್ರಯತ್ನ ಮಾಡಿದ್ರು. ಪ್ರಧಾನಿ ಹಾಸನ, ಮಂಡ್ಯಕ್ಕೆ ಬಂದು ಹೋದ್ರು. ಚನ್ನಪಟ್ಟಣಕ್ಕೆ ಮೋದಿ ಬಂದಿದ್ದರೂ ಕುಮಾರಣ್ಣ ಗೆಲ್ಲಲಿಲ್ಲವೇ! ಇನ್ನೂ ನಮಗೆ ಐದು ವರ್ಷ ಸಮಯ ಇದೆ ಎಲ್ಲವನ್ನು ಸರಿ ಮಾಡಿಕೊಳ್ತೇವೆ ಎಂದು ತಿಳಿಸಿದರು.

ಬೇಲೂರಿನಲ್ಲಿ ಜೆಡಿಎಸ್ ಸೋಲಿಸಲೇಬೇಕು ಅಂತಾ ಪ್ರಧಾನಿ ಬಂದರು. ಏನು ಮಾಡೋಕೆ ಆಗುತ್ತೆ, ಈ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆಯಲ್ಲಿ ಏನೂ ಪರಿಣಾಮ ಬೀರುವುದಿಲ್ಲ. ಕಾಲ ಇನ್ನೂ ಇದೆ ನೋಡ್ತಾ ಇರಿ, ದೇವೇಗೌಡರು ಸುಮ್ಮನೇ ಕೂರಲ್ಲ. ದೇವೇಗೌಡರಿಗೆ ಇನ್ನೂ ಶಕ್ತಿ ಇದೆ. ಹಾಸನದಲ್ಲಿ ಅಲ್ಪ ಸಂಖ್ಯಾತರು ನಮ್ಮ ಪಕ್ಷದ ಕೈ ಹಿಡಿದಿದ್ದಾರೆ. ಅಲ್ಪಸಂಖ್ಯಾತರಿಗೆ ಅವಕಾಶ ಕೊಟ್ಟಿದ್ದು ಜೆಡಿಎಸ್. ಬಿಜೆಪಿ ಅವರು ಅಧಿಕಾರದಿಂದ ಕೆಳಗೆ ಇಳಿಯುವಾಗ ವಿದ್ಯುತ್‌ ಬೆಲೆಯನ್ನು ಒಂದು ಯೂನಿಟ್‌ಗೆ 70 ಪೈಸೆ ಏರಿಸಿ ಒಂದು ಶಾಕ್ ಕೊಟ್ಟಿದಾರೆ. ಇದನ್ನು ಇಳಿಸಲಿ, ಕಾಂಗ್ರೆಸ್‌ನಲ್ಲಿ ಯಾರಾದ್ರೂ ಸಿಎಂ ಆಗಲಿ ಆದರೇ ಒಳ್ಳೆ ಕೆಲಸ ಮಾಡಿಲಿ, ಹಾಸನದ ಅಭಿವೃದ್ಧಿ ಮಾಡಿದರೆ ಸಂತೋಷ ಎಂದು ಸಲಹೆ ನೀಡಿದರು.

ಸಿಎಂ ಜಿಲ್ಲೆಯಲ್ಲೇ ಬಿಜೆಪಿಯವರು ಒಂದು ಸ್ಥಾನ ಗೆದ್ದಿದಾರೆ, ನಾನು ನಾಲ್ಕಾದರೂ ಗೆದ್ದಿದ್ದೀನಿ ಎಂದ ಅವರು, ದಿವಂಗತ ಎಚ್‌.ಎಸ್‌. ಪ್ರಕಾಶ್ ಅವರು ನಾಲ್ಕು ಬಾರಿ ಗೆದ್ದು ಶಾಸಕರಾಗಿದ್ದರು. ಮತದಾರರು ಈಗ ಅವರ ಮಗನನ್ನು ಗೆಲ್ಲಿಸಿ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕೆಲವರು 50 ಸಾವಿರ ಮತ ಇಲ್ಲವೇ ಒಂದು ಲಕ್ಷ ಮತ ತಗೋತಿನಿ ಅಂತ ಹೇಳಿಕೆ ಕೊಟ್ಟಿದ್ರು. ಈಗ ಜನರು ಸ್ವರೂಪ್ ಕಡೆ ಒಲವು ತೋರಿಸಿದ್ದಾರೆ. ದೇವೇಗೌಡರು ರಾಜಕೀಯದಲ್ಲಿ ಸುಮ್ಮನೇ ಕೂರೊರಲ್ಲ ಎಂದರು.

ನಮ್ಮನ್ನ ತೆಗೆಯಲು ಎರಡೂ ರಾಷ್ಟ್ರೀಯ ಪಕ್ಷಗಳು ಹೋರಾಡಿದ್ರು. ಎಲ್ಲವನ್ಮು ಎದುರಿಸಿ ಕುಮಾರಣ್ಣ 19 ಸ್ಥಾನನಾದರೂ ತಗೊಂಡವರೆ. ರಾಜ್ಯದ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡ್ತೇವೆ. ಹಾಸನದಲ್ಲಿ ಸ್ವರೂಪ್ ಜೊತೆಗೆ ನಾನು ನಿಲ್ತೇನೆ, ಸಂಸದರು ಇದ್ದಾರೆ, ದೇವೇಗೌಡರ ಮಾರ್ಗದರ್ಶನ ಇದೆ. ಖಂಡಿತಾ ಹಾಸನ ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡುತ್ತೇವೆ. ನಾವೇನೂ ಯಾರಿಗೂ ತೊಂದರೆ ಕೊಡೋದಿಲ್ಲ. ಇನ್ನೊಬ್ಬರಿಗೆ ಕಿರುಕುಳ ಕೊಡೋದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಒಳ್ಳೆ ಕೆಲಸ ಮಾಡಿ ಇನ್ನೊಂದು ಸ್ಥಾನ ಹೆಚ್ಚು ಮಾಡಿಕೊಳ್ಳಲಿ ಎಂದರು.

ನಾನು ಬದುಕಿರುವುದರೊಳಗೆ ಹಾಸನ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವ ಆಸೆ ಇದೆ. ಮಾಡಿಯೇ ಮಾಡುತ್ತೇನೆ. ಇಲ್ಲವಾದರೇ ಇನ್ನೊಂದು ಸಾರಿ ರಾಜಕೀಯ ಕ್ಷೇತ್ರಕ್ಕೆ ಬರುವುದಿಲ್ಲ. ಅಭಿವೃದ್ಧಿ ಕೆಲಸಕ್ಕೆ ಕಾಂಗ್ರೆಸ್ ಸರಕಾರ ಮಾಡಿಕೊಟ್ಟರೆ ಸಂತೋಷ. ಲೋಕಸಭೆ ಚುನಾವಣೆಗೆ ಹಾಸನ ಜಿಲ್ಲೆಯಿಂದ ಪ್ರಜ್ವಲ್ ಸ್ಪರ್ಧೆ ಮಾಡುತ್ತಾನೆ. ದೇವೇಗೌಡರು ಕೂಡ ಸ್ಪರ್ಧೆ ಮಾಡಿ ಲೋಕಸಭೆಯಲ್ಲಿ ಕೂರುತ್ತಾರೆ ಎಂದು ಹೇಳಿದರು.

Home
Videos
Shop
error: Content is protected !!