ಕರ್ನಾಟಕ
ಕನಕಪುರದಲ್ಲಿ ಡಿಕೆ ಶಿವಕುಮಾರ್ ಜತೆ ಡಿಕೆ ಸುರೇಶ್ ಕೂಡಾ ನಾಮಪತ್ರ ಸಲ್ಲಿಸಿದ್ದೇಕೆ? ಕೊನೆಗೆ ಯಾರು ಸ್ಪರ್ಧಿಸ್ತಾರೆ?
ರಾಮನಗರ : ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಡಿಕೆ ಶಿವಕುಮಾರ್ ಸ್ಪರ್ಧೆಗೆ ಸಮಸ್ಯೆ ಮಾಡಬಹುದು. ಹೀಗಾಗಿ, ಮುಂಜಾಗ್ರತೆಯಾಗಿ ನಾನು ಕೂಡಾ ಕನಕಪುರದಲ್ಲಿ ನಾಮಪತ್ರ ಸಲ್ಲಿಸಿದ್ದೇನೆ ಎಂದು ಡಿಕೆ ಸುರೇಶ್ ತಿಳಿಸಿದ್ದಾರೆ.
ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ಕೊನೆಯ ದಿನವಾದ ಗುರುವಾರ ಏಕಾಏಕಿ ಡಿಕೆ ಶಿವಕುಮಾರ್ ಅವರ ಸಹೋದರ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಕೂಡಾ ನಾಮಪತ್ರ ಸಲ್ಲಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಡಿಕೆ ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿದೆ. ಮುನ್ನೆಚ್ಚರಿಕ ಕ್ರಮವಾಗಿ ನಾನೂ ನಾಮಪತ್ರ ಸಲ್ಲಿಸಿದ್ದೇನೆ ಎಂದರು.
ಹೈಕಮಾಂಡ್ ಸೂಚನೆ
ಕನಕಪುರ ನನ್ನ ಮತ ಕ್ಷೇತ್ರ. ಕನಕಪುರದಿಂದ ಸ್ಪರ್ಧೆ ಮಾಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖಂಡರ ಸೂಚನೆ ನೀಡಿದರು. ಡಿಕೆ ಶಿವಕುಮಾರ್ ಅವರ ವಿರುದ್ಧ ಕೆಲವೊಂದು ಕುತಂತ್ರಗಳು ನಡೆಯುತ್ತಿರುವುದು ಕಂಡುಬಂದಿದೆ. ಬಿಜೆಪಿ ಅವರಿಗೆ ಡಿಕೆ ಶಿವಕುಮಾರ್ ಅವರ ಮೇಲೆ ಸಾಕಷ್ಟು ಕಣ್ಣಿದೆ. ಬಿಜೆಪಿ ಅವರಿಗೆ ಜನ ಬೆಂಬಲದಿಂದ ಏನು ಮಾಡಲು ಸಾಧ್ಯವಿಲ್ಲ. ಹೀಗಾಗಿ, ವಾಮಮಾರ್ಗ ಹಿಡಿದಿದ್ದಾರೆ ಎಂದರು.
ಹಿಂದಿನ ಪ್ರಕರಣಗಳಲ್ಲಿ ಹಾಜರಾಗುವಂತೆ ನೋಟಿಸ್ ಬರ್ತಿದೆ
ಡಿಕೆ ಶಿವಕುಮಾರ್ ಅವರ ಹಿಂದಿನ ಪ್ರಕರಣಗಳ ಕುರಿತು ನೋಟಿಸು ಬರುತ್ತಿದೆ. ನಾಲ್ಕು ದಿನಗಳ ಹಿಂದೆ ಚೆನ್ನೈನಿಂದ ಡಿಕೆಶಿ ಅವರು ಸ್ವತಃ ಬರಬೇಕು ಎಂದು ನೋಟಿಸ್ ನೀಡಿದ್ದಾರೆ. ಚುನಾವಣೆ ಇರುವ ಕಾರಣ ನಾವು ಒಂದು ತಿಂಗಳು ಬರಲು ಆಗುವುದಿಲ್ಲ. ಜವಾಬ್ದಾರಿ ನಮ್ಮ ಮೇಲಿದೆ. ಈಗಾಗಿ ನಿಮಗೆ ಏನು ಮಾಹಿತಿ ಬೇಕೋ ನಾವು ಕೊಡುತ್ತೇವೆ ಅಂತ ನಾವು ಹೇಳಿದ್ದೇವೆ. ಈಗಾಗಲೇ ಸುರ್ಪೀಂ ಕೋರ್ಟ್, ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಇದೆ ಎಂದು ಹೇಳಿದರು.
ಅಧಿಕಾರ ದುರುಪಯೋಗ
ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಳ್ಳಬಹುದು. ವಿರೋಧ ಪಕ್ಷದವರನ್ನ, ಡಿಕೆಶಿ ಅವರನ್ನ ಟಾರ್ಗೆಟ್ ಮಾಡಿದ್ದಾರೆ. ಕ್ಷೇತ್ರಕ್ಕೆ ಸಂಬಂಧ ಇಲ್ಲದವರನ್ನ ಬೆಂಗಳೂರಿನಿಂದ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಅವರನ್ನು ಗೆಲ್ಲಿಸಲು ಏನು ಬೇಕಾದರು ಮಾಡಬಹುದು. ಹೀಗಾಗಿ, ನಾವು ಯಾರಿಗೂ ಹೆದರುವ ಪ್ರಶ್ನೆ ಇಲ್ಲ. ನಾನು ಬಿ ಫಾರ್ಮ್ ಹಾಕಿ ನಾಮಪತ್ರ ಸಲ್ಲಿಸಿದ್ದೇನೆ ಎಂದು ಸಂಸದ ಡಿಕೆ ಸುರೇಶ್ ತಿಳಿಸಿದರು.
ಡಿಕೆ ಶಿವಕುಮಾರ್ ವಿರುದ್ಧ 19 ಪ್ರಕರಣಗಳು
ಚುನಾವಣಾ ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ಅವರು ಸಲ್ಲಿಸಿರುವ ಅಫಿಡೆವಿಟ್ ಪ್ರಕಾರ, ಡಿಕೆ ಶಿವಕುಮಾರ್ ಅವರ ಮೇಲೆ ಐಟಿ, ಇಡಿ, ಪೊಲೀಸ್ ಠಾಣೆಗಳು ಸೇರಿದಂತೆ 19 ಕಡೆಗಳಲ್ಲಿ ಪ್ರಕರಣಗಳಿವೆ. ನ್ಯಾಯಾಲಯ, ಸಂಸ್ಥೆಗಳಿಂದ ತನಿಖೆಗಳು ನಡೆಯುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಯಾವ ಸಂದರ್ಭದಲ್ಲಾದರೂ ಡಿಕೆ ಶಿವಕುಮಾರ್ ಅವರ ವಿರುದ್ಧ ಕ್ರಮಜರುಗಿಸಿ ಚುನಾವಣೆಗೆ ಸ್ಪರ್ಧೆ ಮಾಡದಂತೆ ಕಟ್ಟಿ ಹಾಕುವ ಸಾಧ್ಯತೆ ಇದೆ. ಹೀಗಾಗಿಯೇ ಕಾಂಗ್ರೆಸ್ ಹೈಕಮಾಂಡ್ ಡಿಕೆ ಸುರೇಶ್ ಅವರಿಗೆ ನಾಮಪತ್ರ ಸಲ್ಲಿಸುವಂತೆ ಸೂಚಿಸಿದೆ.
ಅಂತಿಮವಾಗಿ ಯಾರು ಸ್ಪರ್ಧೆ ಮಾಡಬಹುದು?
ನಾಮಪತ್ರ ಪರಿಶೀಲನೆ ಹಾಗೂ ವಾಪಸ್ ಪಡೆಯಲು ಏ.24ವರೆಗೂ ಕಾಲಾವಕಾಶ ಇದೆ. ಅಷ್ಟರೊಳಗೆ ಡಿಕೆ ಶಿವಕುಮಾರ್ ಅವರಿಗೆ ಹಿಂದಿನ ಪ್ರಕರಣಗಳಲ್ಲಿ ಯಾವುದೇ ಸಮಸ್ಯೆಯಾಗದಿದ್ದರೆ ನಾಮಪತ್ರವನ್ನು ಡಿಕೆ ಸುರೇಶ್ ಹಿಂಪಡೆಯಲಿದ್ದಾರೆ. ತಾಂತ್ರಿಕ ಸಮಸ್ಯೆ ಎದುರಾದರೆ, ಡಿಕೆ ಶಿವಕುಮಾರ್ ಕಡ್ಡಾಯ ವಿಚಾರಣೆ ಹಾಜರಾಗಬೇಕಾದ, ಚುನಾವಣೆಯಿಂದ ದೂರ ಸರಿಯಬೇಕಾದ ಸಂದರ್ಭ ಬಂದರೆ ಡಿಕೆ ಸುರೇಶ್ ಅವರೇ ಸ್ಪರ್ಧೆ ಮಾಡಲಿದ್ದಾರೆ.





