Connect with us

ಕರ್ನಾಟಕ

ಆಯನೂರು ಮಂಜುನಾಥ್ ಮೊನ್ನೆ ಬಿಜೆಪಿ , ಇಂದು ಜೆಡಿಎಸ್ ಅಭ್ಯರ್ಥಿ: ಅಂತಿಮ ದಿನ ಬದಲಾಯ್ತು ಶಿವಮೊಗ್ಗ ಕಣ

Published

on

ಶಿವಮೊಗ್ಗ: ಎರಡು ದಿನಗಳ ಹಿಂದೆ ಬಿಜೆಪಿ ಮುಖಂಡ ಹಾಗೂ ಎಂಎಲ್ ಸಿಯಾಗಿದ್ದ ಆಯನೂರು ಮಂಜುನಾಥ್, ಬುಧವಾರವಷ್ಟೇ ಜೆಡಿಎಸ್ ಸೇರಿ ಗುರುವಾರ ಜೆಡಿಎಸ್ ಅಭ್ಯರ್ಥಿಯಾಗಿ ಶಿವಮೊಗ್ಗ ನಗರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಒಂದೇ ದಿನದಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚಿತ್ರಣವೇ ಬದಲಾಗಿದೆ.

ಬಿಜೆಪಿ ಯಾರನ್ನು ಕಣಕ್ಕಿಳಸುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದ ಆಯನೂರು ಮಂಜುನಾಥ್ ತಮ್ಮ ನಿರ್ಧಾರ ಪ್ರಕಟಿಸಲು ಸಮಯವನ್ನೂ ತೆಗೆದುಕೊಂಡರು. ನಾಮಪತ್ರ ಸಲ್ಲಿಕೆ ಗೆ ಒಂದು ದಿನ ಬಾಕಿಯಿರುವಾಗಿ ಕಮಲ ಪಕ್ಷ ತೊರೆದು ತೆನೆ ಹೊತ್ತರು. ಬಿಜೆಪಿ ಆಯನೂರು ರಾಜೀನಾಮೆ ಕೊಟ್ಟು ಜೆಡಿಎಸ್ ಸೇರಿದ ನಂತರವೇ ಅಭ್ಯರ್ಥಿಯನ್ನು ಪ್ರಕಟಿಸಿತ್ತು.

ಈ ಮೊದಲೇ ಹೇಳಿದಂತೆ ಆಯನೂರು ಮಂಜುನಾಥ್ ಈಶ್ವರಪ್ಪ ಅವರಾಗಲಿ, ಅವರ ಪುತ್ರನಾಗಲಿ ಅಥವಾ ಅವರ ತದ್ರೂಪಿನಂತೆ ಇರುವ ವ್ಯಕ್ತಿಯಾಗಲಿ ಅವರ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸುವೆ ಎಂಬ ತಮ್ಮ ಹೇಳಿಕೆಗೆ ಅವರು ಇಂದು ಕೂಡ ಬದ್ಧರಾದರು.

ಈ ಬಾರಿ ಸೌಹಾರ್ದತೆಗೆ ಮತ

ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯವಾಗಿ ನನಗೆ ಶಿವಮೊಗ್ಗದಲ್ಲಿ ಶಾಂತಿ ಬೇಕಾಗಿದೆ ಎಂದು ಪುನರುಚ್ಚರಿಸಿದರು. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾಂತೀಯ ಪಕ್ಷದಿಂದ ನಾನು ಸ್ಪರ್ಧಿಸಿದ್ದೇನೆ. ಅದಕ್ಕಾಗಿ ವಿಶೇಷ ತಯಾರಿ ನಡೆಸಿದ್ದೇನೆ. ಶಿವಮೊಗ್ಗದಲ್ಲಿ ೩೦ ವರ್ಷಗಳ ಕಾಲ ಏಕತಾನತೆಯ ರಾಜಕಾರಣವನ್ನು ನೋಡಿದ ಜನತೆಗೆ ಹೊಸತನ ಬೇಕಾಗಿದೆ. ಅದರ ಅನುಭವ ಕೂಡ ನಮಗಾಗುತ್ತಿದೆ. ಅತಿಹೆಚ್ಚು ಮತಗಳ ಅಂತರದಿಂದ ನಾನು ಗೆಲ್ಲುತ್ತೇನೆ ಎಂದರು. ಜನ ಈ ಸಲ ಶಾಂತಿ, ಸೌಹಾರ್ದತೆಗೆ ಮತ ನೀಡಲಿದ್ದಾರೆ. ಶಿವಮೊಗ್ಗ ನಿಷೇಧಾಜ್ಞೆ ಮುಕ್ತ ನಗರವಾಗಬೇಕು. ಚುನಾವಣಾ ತಂತ್ರಗಳನ್ನ ನಾನು ಕರಗತ ಮಾಡಿಕೊಂಡಿದ್ದೇನೆ. ಇವೆಲ್ಲವನ್ನ ಪ್ರಯೋಗ ಮಾಡುತ್ತೇನೆ. ಕಾದು ನೋಡಿ ಎಂದು ಆಯನೂರು ಹೇಳಿದರು.

ಚನ್ನಬಸಪ್ಪ ಅವರು ಈಶ್ವರಪ್ಪ ತದ್ರೂಪ

ಚೆನ್ನಬಸಪ್ಪ ಅವರು ಸ್ಪರ್ಧೆಗೆ ಸಂಬಂಸಿದಂತೆ ಮಾತನಾಡಿದ ಅವರು, ಚೆನ್ನಬಸಪ್ಪ ಅವರು ಈಶ್ವರಪ್ಪ ಅವರ ಪ್ರತಿರೂಪವೇ ಆಗಿದ್ದಾರೆ. ಅದಕ್ಕಿಂತ ಒಂದು ಕೈ ಮಿಗಿಲು ಎನ್ನಬಹುದು. ಅವರದೇ ಸಿದ್ಧಾಂತದ ವ್ಯಕ್ತಿ ಚೆನ್ನಬಸಪ್ಪ. ನಾನು ಅತ್ಯಂತ ಆತ್ಮವಿಶ್ವಾಸದಿಂದಲೇ ನಾಮಪತ್ರ ಸಲ್ಲಿಸಿದ್ದೇನೆ. ಜನ ಈ ಬಾರಿ ಬದಲಾವಣೆ ಬಯಸಿದ್ದಾರೆ. ನನ್ನ ಗೆಲುವು ಖಚಿತ ಎಂದರು.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಶಾರದಾ ಪೂರ‍್ಯಾ ನಾಯ್ಕ, ರಾಮಕೃಷ್ಣ ಇದ್ದರು.

ನಾಮಪತ್ರ ಸಲ್ಲಿಸುವ ಮೊದಲು ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಜೆಡಿಎಸ್‌ಗೆ ಅತಿಹೆಚ್ಚಿನ ಸ್ಥಾನಗಳು ಲಭಿಸಲಿವೆ. ಕುಮಾರಸ್ವಾಮಿಯವರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ. ಜೆಡಿಎಸ್ ಪಕ್ಷವನ್ನು ಎಲ್ಲಾ ವರ್ಗದ ಜನರು ಪ್ರೀತಿಸುತ್ತಿದ್ದಾರೆ. ಕಾರ್ಯರ್ತರು ಈ ಬಾರಿ ತುಂಬಾ ಉತ್ಸಾಹದಲ್ಲಿದ್ದಾರೆ. ಜೆಡಿಎಸ್ ಹೊಸ ಇತಿಹಾಸಕ್ಕೆ ತೆರೆದುಕೊಳ್ಳಲಿದೆ ಎಂದರು. ಈ ಸಂದರ್ಭದಲ್ಲಿ ಹೆಚ್.ವಿ ಮಹೇಶ್ವರಪ್ಪ, ಪರಂಧಾಮ ರೆಡ್ಡಿ, ಚಾಬೂ ಸಾಬ್, ಶಾಂತಾ ಸುರೇಂದ್ರ, ನಾಗರಾಜ್ ಕಂಕಾರಿ, ಪಾಲಾಕ್ಷಿ ಮುಂತಾದವರಿದ್ದರು.

Home
Videos
Shop
error: Content is protected !!