ಕೊಡಗು
ಮಾದಕ ವಸ್ತು ಮಾರಾಟ: ಮಾಲು ಸಮೇತ ಮೂವರ ಬಂಧನ
ಕುಶಾಲನಗರ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಮೂವರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.
ಕೂಡಿಗೆ ಸೇತುವೆ ಬಳಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರ ತಂಡ ಕುಶಾಲನಗರದ ಎಚ್.ಅಕ್ಬರ್, ಕೇರಳ ಮೂಲದ ಮಹಮದ್ ರಫಿ, ಟಿ.ಕೆ ರಿಷಿಕುಮಾರ್ ಎಂಬುವವರನ್ನು ಬಂಧಿಸಿ ಅವರ ಬಳಿ ಇದ್ದ 13 ಗ್ರಾಂ ಗಾಂಜಾ, 41 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಕೃತ್ಯಕ್ಕೆ ಬಳಸಿದ್ದ ಎರಡು ಬೈಕು, ಎರಡು ಮೊಬೈಲ್, 9,500 ನಗದು ವಶಕ್ಕೆ ಪಡೆಯಲಾಗಿದೆ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿಗಳು ಕೂಡಿಗೆ ಸೇತುವೆ ಬಳಿ ದಾಳಿ ಮಾಡಿದಾಗ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ನಂತರ ಅವರ ವಿಚಾರಣೆ ಬಳಿಕ ಕುಶಾಲನಗರದ ಖಾಸಗಿ ವಸತಿ ಗೃಹದಲ್ಲಿದ್ದ ಇಬ್ಬರನ್ನು ಬಂಧಿಸಲಾಯಿತೆಂದು ಹೆಚ್ಚುವರಿ ಪೊಲೀಸ್ ಆಧೀಕ್ಷಕ. ಕೆ.ಎಸ್.ಸುಂದರ್ ರಾಜ್ ತಿಳಿಸಿದ್ದಾರೆ.
ಕುಶಾಲನಗರ ಡಿವೈ ಎಸ್ ಪಿ. ಆರ್ ವಿ, ಗಂಗಾಧರಪ್ಪ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್ ಸೂಚನೆಯಂತೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಡಿ.ಎಸ್.ಪುನೀತ್, ಎಂ.ದಿನೇಶ್ ಕುಮಾರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





